ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಅಭಿನಯ ಮತ್ತು ಸುರದ್ರೂಪಿ ನಾಯಕ ನಟರಲ್ಲಿ 70ರ ದಶಕದ ನಂತರ ಕಾಣಿಸಿಕೊಂಡ ಡಾ. ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ನಂತರ ಅನಂತ್ನಾಗ್ ಎಲ್ಲಾ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಐದು ದಶಕಗಳ ಕನ್ನಡ ಚಿತ್ರರಂಗದ ಪಯಣದಲ್ಲಿ ಅನಂತ್ನಾಗ್ ಮುಕ್ತ ಮನಸ್ಸಿನಿಂದ ಮತ್ತು ಸಾರ್ಥಕ ಕಲಾಸೇವೆಯಿಂದ ತಮ್ಮನ್ನು ಚಿತ್ರಜೀವನಕ್ಕೆ ಅರ್ಪಿಸಿಕೊಂಡಿದ್ದಾರೆ. ನಾಯಕನಲ್ಲದೆ ಹಲವಾರು ವಿವಿಧ ಪೋಷಕ ಪಾತ್ರಗಳಲ್ಲೂ ಹಾಸ್ಯ ನಟನೆಯೊಂದಿಗೆ ನಟಿಸಿ ಸೈ ಎನಿಸಿಕೊಂಡು, ಭಾರತದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ ಅಗಾಧವಾದ ಪ್ರತಿಭೆ, ಗ್ಲಾಮರ್ ಮತ್ತು ಪಾತ್ರಕ್ಕೆ ತಕ್ಕ ಅಭಿನಯ ಎಲ್ಲವೂ ಅವರನ್ನು ಮೇರುನಟನನ್ನಾಗಿ ರೂಪಿಸಿತ್ತು. ಪಾರ್ವತಮ್ಮ ರಾಜ್ಕುಮಾರ್ರವರು ಬಿಡುವಿಲ್ಲದ ರಾಜ್ಕುಮಾರ್ ಬದಲಾಗಿ ೭೦ ದಶಕದ ನಂತರ ಕಾದಂಬರಿ ಚಿತ್ರಗಳಿಗೆ ಅನಂತ್ನಾಗ್ ಅನ್ನು ನಾಯಕರನ್ನಾಗಿ ಮಾಡಿ ಚಿತ್ರನಿರ್ಮಿಸಲು ಶಿಫಾರಸ್ಸು ಮಾಡಿರುತ್ತಾರೆ. ಇದು ಇವರ ಅಪ್ರತಿಮ ಪ್ರತಿಭೆಗೆ ಸಾಕ್ಷಿ.


ಈ ಐದು ದಶಕಗಳಲ್ಲಿ ಹಲವಾರು ಉತ್ತಮ ಚಿತ್ರಗಳಲ್ಲಿ ಅಭಿನಯಿಸಿ ಕರ್ನಾಟಕ ಮತ್ತು ದಕ್ಷಿಣ ಭಾರತವಲ್ಲದೆ ಕೇಂದ್ರ ಸರ್ಕಾರದ ಚಿತ್ರಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರ ಜೀವನವು ಚಿತ್ರರಂಗದ ಒಂದು ಭಾಗವಲ್ಲದೇ ರಾಜಕೀಯದಲ್ಲೂ ಮತ್ತು ರಂಗಭೂಮಿಯಲ್ಲೂ ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಕೇಂದ್ರ ಸರ್ಕಾರವು ಕೊಡಮಾಡುವ ಪದ್ಮಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯು 2025ನೇ ಸಾಲಿನಲ್ಲಿ ಅನಂತ್ನಾಗ್ ಅವರನ್ನು ಸನ್ಮಾನಿಸುವ ಮೂಲಕ ಭಾರತ ಚಿತ್ರರಂಗದ ಅದರಲ್ಲೂ ವಿಶೇಷವಾಗಿ ಕರ್ನಾಟಕ ಚಿತ್ರರಂಗದ ಅನಂತ್ನಾಗ್ ಅವರಿಗೆ ನೀಡುವ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಇದೊಂದು ಐತಿಹಾಸಿಕ ಮತ್ತು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಗರಿಮೆ ತಂದಿದೆ.

